ಗುರುವಾರ, ಆಗಸ್ಟ್ 7, 2014

ಅಧ್ಯಾಯ-೧. ಬ್ರಹ್ಮನಿಗೂ ಭವಲೋಕದ(ಭೂಲೋಕದ) ಚಿಂತೆ-೧

ಸೃಷ್ಟಿಕರ್ತ ಬ್ರಹ್ಮನ ಸತ್ಯಲೋಕದಿಂದಲೇ ಈ ಕಥಾನಕದ ಆರಂಭ...
ಬ್ರಹ್ಮದೇವನಿಗೆ ಭವಲೋಕದ(ಭೂಲೋಕದ) ಚಿಂತೆ... ಭೂಲೋಕದಲ್ಲಿ ಏನು ನಡೆಯುತ್ತಿದೆ...? ಮುಂದೇನಾದೀತು..?             ಸತ್ ಶಕ್ತಿ, ಸಜ್ಜನರ ರಕ್ಷಣೆ ಹೇಗೆಂಬುದೇ ಅಂದಿನ ಚರ್ಚೆಯಲ್ಲಿ ಗಂಭೀರ ವಿಷಯ. ಮೊದಲು ಜಗಜ್ಜನನಿ ಸರಸ್ವತಿಯೊಂದಿಗೆ ಸಂವಾದ ಪ್ರಾರಂಭ....

ಅದು ಕಲಿಯುಗಾರಂಭಕಾಲದ ವೇದಕಾಲ. ಇಂದಿಗಿಂತಲೂ ಸಾಕಷ್ಟು ಸಮೃದ್ಧಿ ಮತ್ತು ಸಂಪಧ್ಬರಿತ ಕಾಲ. ಜನಜೀವನದಲ್ಲಿ ಶಾಂತಿ ಸಮಾಧಾನ, ದೇವರಲ್ಲಿ ನಂಬಿಕೆ, ಸತ್ಯ ಧರ್ಮಕ್ಕೆ ತಲೆಬಾಗುವಿಕೆ, ಪಾಪ ಕರ್ಮಗಳಿಗೆ ಅಂಜಿಕೆ ಇತ್ತು. ಹೆಣ್ಣನ್ನು ತುಂಬ ಗೌರವದಿಂದ ಕಾಣುತ್ತಿದ್ದರು. ಹೆಣ್ಣು ತಾಯಿಯಾಗಿ, ಅಕ್ಕ ತಂಗಿಯಾಗಿ ಮಮತಾಮಯಿಯಾಗಿ, ಹೆಂಡತಿಯಾಗಿ ಸಹನೆ ಸಹಾನುಭೂತಿ ಅನುಕಂಪಗಳ ಆಗರವಾಗಿ ಅಷ್ಟೇಕೆ ಪ್ರೀತಿ ಪ್ರೇಮ ಮತ್ತು ತ್ಯಾಗಕ್ಕೆ ಇನ್ನೊಂದು ಹೆಸರೇ ಅವಳೆಂಬತೆ ಇರುತ್ತಿದ್ದಳು. ಅವಿಭಕ್ತ ಕುಟುಂಬದಲ್ಲಿ ಒಗ್ಗಟ್ಟಿನಿಂದ ಇದ್ದು ಎಲ್ಲರೂ ದುಡಿಮೆಯಲ್ಲಿ ಹಂಚಿಕೊಂಡು ಬಾಳುತ್ತಿದ್ದರು. ಸಮಾಜದಲ್ಲಿ ಸ್ನೇಹ, ವಿಶ್ವಾಸ, ಸೌಹಾರ್ದತೆ ನೆಲೆಸಿತ್ತು. ಆಳುವ ಪ್ರಭುಗಳಲ್ಲೂ ದೈವಿಕತೆ ಧಾರ್ಮಿಕತೆಯೇ ಪ್ರಧಾನವಾಗಿತ್ತು.
ಜನರು’ರಾಜಾ ಪ್ರತ್ಯಕ್ಷ ದೇವತಾ’ ಎಂಬುದನ್ನು ರಾಜರುಗಳಲ್ಲಿ ಕಾಣಬಲ್ಲವರಾಗಿದ್ದರು.
ಹೀಗಿದ್ದೂ ಈ ಪ್ರಪಂಚದಲ್ಲಿ ತ್ರಿಗುಣಗಳ ಪ್ರಭಾವವೆಂಬುದು ಎಲ್ಲಕಾಲಕ್ಕೂ ಇರುವುದೇ ಅಲ್ಲವೇ...?


ಆ ಕಾಲದಲ್ಲಿ ಜನಸಂಖ್ಯೆ ಕಡಿಮೆ ಇದ್ದರೇನು! ಜನರಲ್ಲಿ ಸಾತ್ವಿಕತೆ ಸಭ್ಯಜೀವನದಲ್ಲಿ ಬಹಳಷ್ಟು ನಂಬಿಕೆ ಇದ್ದರೇನು! ಸಂತ ಮಹಾಮಹಿಮರ ಸತ್ ಶಕ್ತಿ ತೇಜೋಮಯವಾಗಿದ್ದರೇನು! ಕ್ಷತ್ರಿಯರಲ್ಲಿ ಧರ್ಮಬೀರುಗಳಿದ್ದರೇನು!  ರಜೋಗುಣ, ತಮೋಗುಣಗಳ ಪ್ರಭಾವವು ಹೆಚ್ಚುತ್ತಲೇ ಇತ್ತು. ಆದೆರೆ, ರಜೋಗುಣ, ತಮೋಗುಣಗಳ ಪ್ರಮಾಣವು ಎಷ್ಟಿರಬೇಕೋ ಅಷ್ಟೇ ಇರಬೇಕಷ್ಟೇ.. ಅವು  ಹೆಚ್ಚಿದಷ್ಟೂ ಜನರಲ್ಲಿ ಮೋಸ, ವಂಚನೆ, ಕಳ್ಳ ಕಾಕರಲ್ಲಿ ಕೊಲೆ ಸುಲಿಗೆ, ದರೋಡೆ, ಭ್ರಷ್ಟರ ಅನಾಚಾರ ಅವ್ಯವಹಾರಗಳು, ಕಾಮುಕರಲ್ಲಿ ಅತ್ಯಾಚರಗಳು, ದುಷ್ಟರಲ್ಲಿ -ರಾಕ್ಷಸರಲ್ಲಿ ಹಿಂಸೆ, ಕ್ರೌರ್ಯಗಳೆಲ್ಲವೂ ಆಗಾಗ್ಗೆ ತಲೆದೋರುತ್ತಿದ್ದವು. ಅವು ಮೇರೆ ಮೀರಿದಷ್ಟೂ ಜೀವಜಗತ್ತಿನ ಅಳಿವು ಉಳಿವಿನ ಪ್ರಶ್ನೆಯೇ ಕಾಡುತ್ತದಲ್ಲ...? 
ಹೀಗಾಗಿ ಬ್ರಹ್ಮನಿಗೋ ಎಂದಿಗಾದರೂ ಬಿಟ್ಟೂ ಬಿಡದ ಚಿಂತೆಯೇ... ಅಲ್ಲವೇ? ಈ ಭಂಡರು, ಪುಂಡರು, ಭ್ರಷ್ಟರು ದುಷ್ಟರು, ಭಯೋತ್ಪಾದಕರು, ಹೆಣ್ಣನ್ನು ಗೌರವಿಸದ ಕಾಮಪಿಪಾಸುಗಳು ಇವರೆಲ್ಲ ಭವರೋಗ ಪೀಡಿತರಲ್ಲಿ ಪೀಡಿತರೇ... ಇವರಿಗೆ ಭವಬಂದನ ಹರಿದುಕೊಳ್ಳುವ ಮೋಕ್ಷ ಮಾರ್ಗಕ್ಕಿಂತ ಕೀಳು ಕಾಮನೆಗಳೇ.  ರಾಜಕೀಯವಂತು ಆಡುಂಬುಲವಷ್ಟೇ ಆಗುತ್ತಿರುವುದು  ಕಾಣುತ್ತಿರುವುದೇ ಆಗಿತ್ತಲ್ಲ...
 ಲೋಕದಲ್ಲಿ ಸಾತ್ವಿಕರಿಗೆ ಸಂತರಿಗೆ ಮಹಾನುಭಾವರಿಗೆ ಸದಾ ಸತ್ವಪರೀಕ್ಷೆಯೇ... ಇದೇ ತ್ರಿಗುಣಾತ್ಮಕ ತತ್ವವೇನು? ಮನುಷ್ಯರು ದಿನೇ ದಿನೇ ಬುದ್ಧಿವಂತಿಕೆ ಪ್ರಜ್ಞಾವಂತಿಕೆಯಲ್ಲಿ ಮುಂದುವರೆಯುತ್ತಿದ್ದಾರೆ. ತಮ್ಮ ನಿತ್ಯ ಜೀವನವನ್ನು ಸುಖಮಯವಾಗಿಟ್ಟುಕೊಳ್ಳಲು ಅನೇಕ ಸೌಲಭ್ಯ ಸೌಕರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿಶೇಷ ಜ್ಞಾನವು ವಿಜ್ಞಾನವಾಗಿ ಬೆಳೆಯುತ್ತಿದೆಯಾದರೂ ದುರಹಂಕಾರದಿಂದ ಅದರ ದುರುಪಯೋಗವೂ ನಡೆದಿದೆಯಲ್ಲ...
ಎಂದಿಗಾದರೂ ಸತ್ಯ ಧರ್ಮಕ್ಕೆ ಜಯವೇ ಎಂದೇ ತಿಳಿದೂ ತಿಳಿಯದ ಮೌಢ್ಯವೇಕೆ...?   ಪ್ರಾಕೃತಿಕ  ಭೌತಿಕವಾಗಿ ಸುಂದರವಾದ ಜೈವಿಕ ಜಗತ್ತಿನಲ್ಲಿ ವಿಷಮತೆಗೆ ದೇವರು ಹೊಣೆಯಲ್ಲ. ಈ ಜನರು ಸುಖ ಹೆಚ್ಚಿದಷ್ಟೂ ದುರಾಸೆಯಲ್ಲಿ ಕಡುಸ್ವಾರ್ಥದಲ್ಲಿ ವಿಕೃತ ಮತಿಗಳಾಗಿ ರಜೋಗುಣದ ಆವೇಶಕ್ಕೊಳಗಾಗಿ ಅನರ್ಥಕಾರಿಗಳಾಗುತ್ತಿದ್ದಾರೆ. ತಮೋಗುಣದ ತಮಂಧದ ಕೇಡಿನಲ್ಲಿ ಅವರು ನಾಶಹೊಂದುವುದಲ್ಲದೇ ಜೈವಿಕಜಗತ್ತಿನ ವಿನಾಶಕ್ಕೂ ಕಾರಣರಾಗುತ್ತಿದ್ದಾರೆ.


ಆದ್ದರಿಂದ, ಕಾಲಕಾಲಕ್ಕೆ ಜೈವಿಕಜಗತ್ತಿನ ಸಮತೋಲನಕ್ಕೆ ಸ್ಥಿತಿಸಂರಕ್ಷಣೆಗೆ ಸತ್ ಶಕ್ತಿ ಸ್ವರೂಪವು ಮೈದೋರುವುದೂ ವಿಶ್ವಸೃಷ್ಟಿಯಲ್ಲಿನ ಅಲೌಕಿಕ ಲೀಲೆಯೇ. ಇಲ್ಲಿ ಸಮಸ್ತರಿಗೂ ಭವಬಂಧನ ಹರಿದುಕೊಳ್ಳಲು ಮುಕ್ತ ಅವಕಾಶಗಳಿವೆಯಾದರೂ ಅದನ್ನು ಹರಿದುಕೊಳ್ಳುವ ಬಗೆಯಲ್ಲೂ ವಿಚಿತ್ರ ವಿಲಕ್ಷಣ ವಿಚ್ಛಿಧ್ರಕಾರೀ ನಡೆಗಳಿವೆಯಲ್ಲ...! ಸತ್ ಸಾಧಕರಾಗಲು ಸತ್ವಶಾಲಿಗಳಾಗಲು ಬಯಸುವವರೇ ವಿರಳ. ನೀಚ ಸ್ವಾರ್ಥಿಗಳು ಅವರಲ್ಲೇ ರಾಕ್ಷಸ ಪ್ರವೃತ್ತಿಯ ಕಟ್ಟಾ ದೈವಭಕ್ತರೂ ಇರುವುದೂ ಅವರುಗಳೇ ಹೆಚ್ಚುತ್ತಿರುವುದೂ ಅವರ ರೀತಿ ಕಯುಕ್ತಿಗಳೇ ನೀತಿಯಂತೇ ಸರಿದೋರುತ್ತಿರುವುದೂ ವಿಚಿತ್ರವೇ ಆಗಿದೆಯಲ್ಲ..! ಸಜ್ಜನರು ಬದುಕಿನಲ್ಲಿ ಭ್ರಮಾಧೀನರಾಗುತ್ತಾ ಸಭ್ಯಜೀವನದಲ್ಲಿ ನಂಬಿಕೆಯೆ ಇಲ್ಲವಾಗುತ್ತಿದೆಯೋ ...
ಮುಂದೆ ಓದಿ>>> ಭವಲೋಕದ ಚಿಂತೆ-೨

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ