ಭಾನುವಾರ, ಆಗಸ್ಟ್ 10, 2014

ಬ್ರಹ್ಮನಿಗೂ ಭವಲೋಕದ(ಭೂಲೋಕದ) ಚಿಂತೆ-೩

ಸ್ವಲ್ಪ ತಡೆದು ಮತ್ತೆ ನುಡಿದಳು ಮಾತೆ ಸರಸ್ವತಿ ದೇವಿ, "ತ್ರಿಕಾಲ ಜ್ಞಾನಿಯಾದ ನಿನಗೆ ತಿಳಿಯದಿರುವುದೇನಿದೆ ನಾರದ..."
"ಹೌದು, ನನ್ನ ಮನದ ಮಾತನ್ನೇ ನೀನೂ ನುಡಿಯುತ್ತಿರುವೆ" ನಾರದರೆಂದರು.

"ನಾರದ, ಇದು ಕಲಿಯುಗಾರಂಭ ಕಾಲವಷ್ಟೇ.  ಮುಂದೆ ಮುಂದುವರೆದಂತೆ ಕಲಿಪ್ರವೇಶವಾಗಲಿದೆ. ಅದಕ್ಕಾಗಿ ಮುನ್ಸೂಚನೆ ಮುನ್ನೆಚ್ಚರಿಗಳೂ ಜಂಗಮವೆನಿಸಿರುವ ಜಗತ್ತಿನಲ್ಲಿ ಇರಬೇಕಲ್ಲವೇ..?"ಬ್ರಹ್ಮದೇ ಹೇಳಿದನು."ಪಿತಾಮಹ! ಎಂದಿಗೂ ಅಧರ್ಮದ ಕೈಮೇಲಾಗುವುದೆಂಬುದು ಲೋಕದ ವಾಡಿಕೆ. ಅದು ವಾಡಿಕೆಯಾಗಿಯೇ ಉಳಿಯುವುದಿಲ್ಲ ಅಲ್ಲವೇ ?"ನಾರದರೆಂದರು.

"ಧರ್ಮವು ಯಾವಾದಲೂ ದೇದೀಪ್ಯಮಾನವಾಗಿದ್ದರೆ ಅದರ ಪ್ರಭಾವವೂ ವರ್ಚಸ್ಸೂ ಅರಿವಾಗುವುದಿಲ್ಲ. ಹಾಗೆಂದು ಧರ್ಮವು ಪೂರ್ಣ ಕ್ಷಯಿಸಿ ಹೋಗಬಾರದಲ್ಲವೇ? ಸ್ಥಾವರಕೆ ಅಳಿವುಂಟು ಜಂಗಮಕೆ ಇಲ್ಲ ಎಂಬುದು ಜನರಲ್ಲಿ ಜನಜನಿತವಾಗಿದೆ. ಸ್ಥಾವರಕೆ ಅಳಿವೆಂದರೆ ಸಂಪೂರ್ಣನಾಶವೇನಲ್ಲ... ಜಂಗಮಕೆ ಉಳಿವೆಂದರೆ ದೈವಿಕವಾದ ಪೂರ್ಣತ್ವಕ್ಕೆ ಅಳಿವೆಂಬುದಿಲ್ಲ. " ಬ್ರಹ್ಮದೇವರೆಂದರು.

"ಅಂದಹಾಗೆ, ಕಲಿಪ್ರವೇಶವಾಗುವುದೆಂದರೆ ಕಲಿಗಾಲದ ಉಳಿವಿಗೇ ತಾನೇ..? ಜನಮಾನಸವನ್ನು ಎಚ್ಚರಿಸಿ ಸತ್ ಶಕ್ತಿಯ ಮಹತ್ವದರಿವಿನಲಿ ಮುನ್ನೆಡೆಸಲಿಕ್ಕೆಂದೇ ಆಗುವ ಯುಗಪರಿವರ್ತನೆಗೆ ನಾಂದಿಯಲ್ಲವೇ...?" ನಾರದರೆಂದರು.
"ನಾರದ, ಆಗುವುದೇನಲ್ಲವೂ ಸೂಕ್ತ ಕಾಲಕ್ಕೇ ಆಗುತ್ತದೆ. ಸಂಪೂರ್ಣ ಅನರ್ಥಕಾರಿಯಾಗಿ ಸರ್ವನಾಶವಾದರೆ ಪುನರುತ್ಥಾನ ಪುನರುಜ್ಜೀವನವೂ ದುಸ್ಸಾಧ್ಯವಾದೀತಲ್ಲವೇ..?"

"ಅಂದರೆ,ಧರ್ಮವು ಸಂಪೂರ್ಣ ಕ್ಷಯಿಸಿ ಹೋಗದಂತೆ ಕಾಲಕಾಲಕ್ಕೆ ಜನಜಾಗೃತಿ ಉಂಟಾಗಬೇಕೆಂದೇ...? ಅದೇನು ಕಲಿಪ್ರಭಾವವೋ ಆಳುವವರಲ್ಲಿ ತಾವೇ ಕಟ್ಟಿಕೊಂಡ ವ್ಯೂಹದಲ್ಲಿ ಸಿಕ್ಕು ಹೊರಬರಲಾಗದೇ ಇದ್ದಾರೆ" ನಾರದರೆಂದರು.


"ಹೌದು ನಾರದ ಆಳುವ ಅರಸರ ಕುಯುಕ್ತಿ ನೀತಿಗಲೇ ಅರಾಜಕತೆ ಉಂಟುಮಾಡುತ್ತದೆ. ಅವರೂ ಕಂಗೆಡುವುದಲ್ಲದೇ ಪ್ರಜೆಗಳನ್ನೂ ಕಂಗಾಲಾಗಿಸಿಬಿಡುತ್ತಾರೆ. ಹೀಗಾಗಿ ಯಥಾ ರಾಜಾ ತಥಾ ಪ್ರಜಾ ಎಂಬಂತೇ ತ್ರಿಗುಣಾತ್ಮಕ ಪ್ರಪಂಚದಲ್ಲಿ ಯಾವಾಗಲೂ ಕೆಟ್ಟದ್ದೇ ಎದ್ದು ತೋರುವುದೂ ಕಲಿಪ್ರಭಾವವೇ.. ಆಗುವುದೇನಿದ್ದರೂ ಒಳಿತಿಗೆ ಮಹತ್ವ ಬರಲೆಂದೇ... ಇದು ಭವಿಷ್ಯಕ್ಕೆ ಭಾಷ್ಯ ಬರೆಯುವ ನಿನಗೆ ತಿಳಿಯದೇನು...."

"ನನ್ನ ಅರಿವಿಗೆ ಬಂದಂತೆ ಭವಿಷ್ಯದಲ್ಲಿ ಭರತಖಂಡದಲ್ಲಷ್ಟೇ ಶ್ರೇಷ್ಠವೆನಿಸಿರುವ ಸನಾತನ ಧರ್ಮ ಸಂಸ್ಕೃತಿಗಳು ದೇಶವಿದೇಶಗಳಲ್ಲಿ ವಿದೇಶೀಯರ ಮೇಲೆ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತವೆ. ದುರ್ಜನರು ದಿಗ್ಮೂಢರಾದರೆ, ಸಜ್ಜನರು ಶಾಂತಿ ನೆಮ್ಮದಿ ಕಾಣುತ್ತಾರೆ. ಪುನಃ ಪ್ರಪಂಚದಲ್ಲಿ ಬುದ್ಧಿವಂತರು ಹಾಗೂ ಪ್ರಜ್ಞಾವಂತರಾದವರೆಲ್ಲರೂ ಸನಾತನ ಧರ್ಮ ಸಂಸ್ಕೃತಿಯ ಪರವಾಗಿ ನಿಲ್ಲುತ್ತಾರೆ. ವಿಶ್ವಜೀವನಕ್ಕೆ ಆರೋಗ್ಯಕರ ಸಮಾಜದ ಸತ್ಯ ದರ್ಶನ ಮಾಡಿಸುತ್ತಾರೆ" ತ್ರಿಕಾಲಜ್ಞಾನಿಗಳಾದ ನಾರದರೆಂದರು.

"ಹೌದು, ನಾರದ ಸನಾತನ ಧರ್ಮವೆಂದರೆ ಸಭ್ಯಜೀವನ ಧರ್ಮ. ಅದು ಮನುಷ್ಯರೆಲ್ಲರಿಗೂ ಒಂದೇ ಧರ್ಮ. ಧರ್ಮದ ಉತ್ಕೃಷ್ಟತೆಯನ್ನು ಇಡೀ ಲೋಕವೇ ಕೊಂಡಾಡಿದಾಗ ಅದರ ಮಹತ್ವದ ಅರಿವಾಗುತ್ತದೆ. ಅದಕ್ಕಾಗಿಯೇ ಪ್ರಪಂಚದಲ್ಲಿ ಯಾವಾಗಲೂ ಸಾತ್ವಿಕರು ಸಜ್ಜನರು ಧರ್ಮವೆಂಬ  ದೀಪಕ್ಕೆ ನಿಸ್ವಾರ್ಥ ಸೇವೆಯ ತೈಲವೆರೆಯುತ್ತಾರೆ. ಕಾಲಸಂದಂತೇ ಸಂತರು, ಮಹಾತ್ಮರು ಯುಗಪುರುಷರೂ ಹುಟ್ಟಿ ಬರುತ್ತಾರೆ. ಪ್ರಾಜ್ಞರು ಪ್ರತಿಭಾನ್ವಿತರು, ಪಂಡಿತರು ಮತ್ತು ಮೇಧಾವಿಗಳು ತಮ್ಮ ಕೃತಿಗಳಿಂದ ಧರ್ಮಕ್ಕೆ ಹೊಸ ಬೆಳಕು ಚೆಲ್ಲುತ್ತಾರೆ" ಸರಸ್ವತಿ ದೇವಿ ಗಾಂಭೀರ್ಯದಿಂದ ನುಡಿದಳು.


"ಹೌದು ನಾರದ! ಸೃಷ್ಟಿ ಸಮಷ್ಟಿಯಲ್ಲಿ ಕಾಣುವ ಅತಿ ಸೋಜಿಗದ ಸಂಗತಿಯೇ ಅದಾಗಿರುತ್ತದೆ. ಅಲ್ಲದೇ ಧರ್ಮದ ಪುನರುತ್ಥಾನವಾಗಲೆಂದೇ ಭೂಲೋಕದಲ್ಲಿ ನಿತ್ಯವೂ ಪೂಜೆ ಪುನಸ್ಕಾರಗಳು, ಹೋಮ ಹವನಗಳೂ ಜರುಗುತ್ತಲೇ ಇರುತ್ತವೆ" ಬ್ರಹ್ಮದೇವರೆಂದರು.

"ಆದರೇನು! ದೈವಶ್ರದ್ಧೆ ಭಕ್ತಿಭಾವಗಳು  ಎಲ್ಲರಮೇಲೂ ಪ್ರಭಾವ ಬೀರಲಾರವಲ್ಲವೇ...? ಕೆಲ ನೀಚ ಸ್ವಾರ್ಥಿಗಳಲ್ಲಿ ಹೋಮ ಹವನ ಪೂಜಾದಿಗಳ ಆಚರಣೆಯಲ್ಲೂ ಅವರದೇ ಕೀಳು ಕಾಮನೆಗಳು ನೆರವೇರಲೆಂಬ ಸ್ವ ಇಚ್ಛೆಯೇ ಇರತ್ತದಲ್ಲ..."
"ಅದು ಅವರಿಗೇ ಅರಿಯದಂತ ಮೌಢ್ಯವೇ ಆಗಿರುತ್ತದೆಯಲ್ಲವೇ..?" ಬ್ರಹ್ಮದೇವರೆಂದರು.


"ಪಿತಾಮಹ! ಎಲ್ಲಿ ಯಜ್ಞಯಾಗಾದಿಗಳು ಜರುಗುವವೋ ಅಲ್ಲಿ ನೀವೂ ಪ್ರತಿಷ್ಠಿತರೇ ಅಲ್ಲವೇ...? ತಸ್ಜಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಂ..." ನಾರದರು ತಿಳಿನಗೆಯಲ್ಲೆಂದರು.
"ನಾನು ಅಲ್ಲಿ ಪ್ರತಿಷ್ಠಿತನಾಗುವುದು ಪ್ರಜಾಪಿತನಾಗಿಯಷ್ಟೇ. ಪ್ರಜೆಗಳ ಯೋಗಕ್ಷೇಮಕ್ಕಾಗಿಯೇ ಹೊರತು ಕೇವಲ ಢಂಬಾರಿಗಳಿಗಾಗಿಯಲ್ಲ..." ಬ್ರಹ್ಮದೇವರೆಂದರು ಗಂಭೀರವಾಗಿ.
"ಓಹ್ ! ನಿಮ್ಮ ಉಪಸ್ಥಿತಿಯಲ್ಲಿ ಪ್ರಜೆಗಳು ಪ್ರಭುಗಳಿಗಾಗಿ ಎಲ್ಲವೂ ವಿಧಿವತ್ತಾಗಿ ನಡೆದರೇನೆ ನಿಮಗೆ ಸಂತೋಷವೋ.."

"ನಾರದ! ಭೂಲೋಕದ ಜನರ ಸ್ವಭಾವವೇ ಹಾಗಲ್ಲವೇ? ಅವರಲ್ಲಿ ರಜೋಗುಣದ ಭಕ್ತಿಗಿಂತ ಸತ್ವಗುಣದ ಭಕ್ತಿ ಒಳ್ಳೆಯದು. ತಮೋಗುಣದ ಭಕ್ತಿಗಿಂತ ರಜೋಗುಣದ ಭಕ್ತಿ ಒಳ್ಳೆಯದು. ತಮೋಗುಣದ ಭಕ್ತಿಯಲ್ಲಿ ಸ್ವಾರ್ಥ ಸುಖಲಾಲಸೆಯೇ. ಅವರಲ್ಲಿ ಅಸುರರೂ ಇರುತ್ತಾರೆ. ರಜೋಗುಣದ ಭಕ್ತಿಯುಳ್ಳವರು ಸಾಧಾರಣರು. ಸತ್ವಗುಣದ ಭಕ್ತಿಯುಳ್ಳವರಲ್ಲಿ ಅಸಾಧಾರಣರು. ಈ ಮೂರೂ ಗುಣಸ್ವಭಾವಗಳಲ್ಲಿ ಚಂಚಲ ಚಿತ್ತರೂ ಇರುತ್ತಾರೆ. ಅಸುರರಲ್ಲಿ ಮಹಾನ್ ಶಕ್ತಿ ಶಾಲಿಗಳು, ಸಂತರಲ್ಲಿ ಮಹಾಮಹಿಮಾನ್ವಿತರು ಸದೃಢ ಸಮಚಿತ್ತರೂ ಇರುತ್ತಾರೆ ಅಲ್ಲವೇ...? ಯಾವಾಗಲೂ ಸಾತ್ವಿಕರು ಸತ್ವಗುಣಾಢ್ಯರು ಮತ್ತು ಸಂತರು ತಮಗೆ ಮಾತ್ರವಲ್ಲ ದೇಶಕ್ಕೇ ಒಳಿತನ್ನು ಹಾರೈಸುತ್ತಿರುತ್ತಾರೆ" ಬ್ರಹ್ಮದೇವರೆಂದರು.



"ಹೌದು ಪಿತಾಮಹ! ಸತ್ ಚಿತ್ ಪ್ರೇರಣೆಯಿಂದ  ದೇಶಕ್ಕೆ ಒಳಿತಾಗಲೆಂದೇ ಭರತಖಂಡದ ತಪೋವನದಲ್ಲಿ ಮಹಾಯಜ್ಞಕ್ಕೆ ಸಿದ್ಧತೆಗಳು ನಡೆದಿವೆ. ದೇಶ ವಿದೇಶಗಳಿಂದ ಸಂತರೂ, ರಾಜ ಮಹಾರಾಜರುಗಳೂ, ಸಮಸ್ತ ಪ್ರಜೆಗಳೂ ಭಾಗಿಗಳಾಗಲಿದ್ದಾರೆ. ಆದರೆ, ನನಗೊಂದು ಸಂದೇಹ ಪಿತಾಮಹ..."
"ದೇವ ಋಷಿಗೆ ಸಂದೇಹವೇ? ಅದೇನು...?
"ಸಂತ ಮಹಾಮಹಿಮರೂ, ಋಷಿ ಮಹರ್ಷಿಗಳೊಂದಿಗೆ ಸಮಸ್ತರೆಲ್ಲರೂ ಸೇರಿ ಲೋಕಕಲ್ಯಾಣಾರ್ಥವಾಗಿಯೇ ಮಹಾಯಜ್ಞವನ್ನೇನೋ ಆಚರಿಸುತ್ತಾರೆ. ಆದರೆ, ಯಜ್ಞಫಲದ ಹವಿಸ್ಸನ್ನು ಎಲ್ಲದೇವಾನು ದೇವತೆಗಳ ಪ್ರೀತ್ಯರ್ಥ ಅರ್ಪಿಸುವರೋ ಅಥವಾ ಸಮಷ್ಟಿಯ ಮೂಲಾಧಾರ ಸತ್ ಶಕ್ತಿಗೆ ಏಕೈಕ ಸ್ವರೂಪನಾದ  ದೇವನೊಬ್ಬನಿಗೇ ಅರ್ಪಿಸುವರೋ ಎಂಬುದೇ ಸಂದೇಹಾಸ್ಪದವಾಗಿದೆ" ನಾರದರೆಂದರು.

ಬ್ರಹ್ಮದೇವರು ಕಿರುನಗೆ ಬೀರಿ ಹೇಳಿದರು-
"ದೇವ ಋಷಿಗಳೇ, ಒಂದೆಡೆ ನಿಷ್ಕಾಮ ಕರ್ಮಿಗಳು ಸತ್ ಸಂಕಲ್ಪದಿಂದ ಮಾಡುವ ದೇವತಾ ಕಾರ್ಯಗಳನ್ನು ಸಮಷ್ಟಿಯಲ್ಲಿ ಜಗತ್ತಿಗೆ ಶುಭವಾಗಲೆಂದೇ ಮಾಡುತ್ತಾರೆ. ಅದರ ಫಲವು ಸರ್ವಗೋಚರವಾದರೂ ಅಗೋಚರವೆನಿಸಿರುವ ಸತ್ ಶಕ್ತಿಗೇ ಮೀಸಲೆಂದು ಭಾವಿಸುತ್ತಾರೆ. ಇನ್ನೊಂದೆಡೆ ಪಾಪಭೀತಿಯೇ ಇಲ್ಲದ ದೊರೆಗಳು, ಪ್ರಜೆಗಳಲ್ಲಿ ದುಷ್ಟಜನರು ತಮ್ಮದೇ ಅನಾಚಾರ ಅಕ್ರಮಗಳಿಗೇ ಪುಣ್ಯಫಲ ಬಯಸಿ ಯಜ್ಞಯಾಗಾದಿ ಪೂಜೆಗಳನ್ನು ನೆರವೇರಿಸುವವರಿರುತ್ತಾರೆ. ಕೆಲವೊಮ್ಮೆ ಭೂಲೋಕದ ರೀತಿನಿತಿಗಳೂ ವಿಚಿತ್ರವೇ. ಅದಕ್ಕೆ ವಿಚಿತ್ರ ಪ್ರಪಂಚವೆನ್ನುವುದಲ್ಲವೇ?"

"ಹಾದು, ಪಿತಾಮಹ! ಮನುಷ್ಯರಲ್ಲಿ ವಿಚ್ಛಿದ್ರಕಾರೀ ದುಷ್ಟರೂ ಪ್ರಳಯಪ್ರತಾಪಿಗಳೂ ಇರುವರು. ಅಂತೆಯೇ ಪ್ರಕೃತಿ ಪ್ರಕೋಪವಿರುವುದೇ. ಏನೇ ಆಗಲಿ ಮನುಕುಲದ ಉದ್ಧಾರಕ್ಕಾಗಿ ಬರಗಾಲವನ್ನು ನೀಗಿ ಮಳೆಸುರಿಸುವಂಥ ದೇವಾಂಶ ಸಂಭೂತರೂ ಭೂಲೋಕದಲ್ಲಿ ಇರುವರಲ್ಲವೇ... ಸಮಷ್ಟಿಗೆ ಮಂಗಳವಾಗುವುದನ್ನೇ ಸ್ವೀಕರಿಸಿ ಜಗದ ಅಸ್ತಿತ್ವವನ್ನು ಕಾಪಾಡುವ ಪ್ರಜಾಪಿತ ನೀನೇ ಅಲ್ಲವೇ..? ನಾರದರೆಂದರು.

"ಅದು ಹಾಗಲ್ಲ ನಾರದ! ಸೃಷ್ಟಿಕರ್ತನಾಗಿ ನಾನು ನಿಮಿತ್ತ ಮಾತ್ರನೇ. ಪ್ರಾಕೃತಿಕವಾದ ಸೃಷ್ಟಿನಿಯಮಗಳಿಗೆ ನಾನೂ ಬದ್ಧನೇ. ಜಗತ್ತಿನಲ್ಲಿ ಧರ್ಮಸಂಸ್ಥಾಪನೆಗೆ ಸ್ಥಿತಿ ಸಂರಕ್ಷಣೆಗೆ ಸತ್ ಸ್ವರೂಪಿಯೊಬ್ಬನಿರುವನು. ಲಯಕ್ಕೆ ಕಾರಣನೂ ಇನ್ನೊಬ್ಬನಲ್ಲವೇ.. ನಿನಗೆ ತಿಳಿಯದೇನು! ಭೂಲೋಕದಲ್ಲಿ ಮಹಾಯಜ್ಞ ನಡೆಯುವ ತಪೋವನಕ್ಕೇ ಹೋಗು ನಾರದ. ಅಲ್ಲಿ ಜಗದೈಕ ಅಸ್ತಿತ್ವಕ್ಕೇ ಕಾರಣನು ಯಾರೆಂಬ ಸತ್ವಪರೀಕ್ಷೆಗೆ ನಾಂದಿಯಾಗಲಿ..." ಎಂದ ಬ್ರಹ್ಮದೇವರು ಗಂಭೀರ ಮುದ್ರೆತಾಳಿದರು.

ಆ ಸತ್ವಪರೀಕ್ಷೆಯು ತನಗೇ ಮೊದಲು ಆಗುವುದೆಂದು ಆ ಪರಬ್ರಹ್ಮನಿಗೂ ತಿಳಿಯದೇ ಹೋದದ್ದು ಜಗನ್ನಿಯಾಮಕ ಲೀಲೆಯೇ.." 

ಧ್ಯಾಯ-೧ ಮುಗಿಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ